1.        

ತಾಗಲಾರದೆ ಕಾವು ಮಾಗುವದೇ ಮಾವು
ತಾಗಲಾರದೆ ತಲೆಗೆ ಬಾಗುವೆವೇ ನಾವು
ಬಾಗಿ ಬಾಳಿದರೆ ತಾಗಲಾರದದು ತಾವು
ತಾಗಿಯೂ ಬಾಗದಿರೆ ಸಾವು ಹರಿದಂತೆ ಹಾವು!
                                                                            - ಎಮ್ಮೆಚ್ಚೆ

ವಿಸ್ತೃತ

ಮಾವಿನಕಾಯಿಯನ್ನು ಪಾಡಿಗೆ ಹಾಕಿ ಕಾವು ಕೊಡದಿದ್ದರೆ ಸರಿಯಾಗಿ ಹಣ್ಣಾಗಲಾರದು. ಅದರಂತೆ ಕೆಲವರು ತಮಗೆ ಪೆಟ್ಟು ಬೀಳುವವರೆಗೂ ತಿದ್ದಿಕೊಳ್ಳುವದಿಲ್ಲ. ಜೀವನದಲ್ಲಿ ಎಲ್ಲರೊಂದಿಗೆ ವಿನಯದಿಂದ ತಿಳಿದು ಬಾಳಿದರೆ ಯಾವುದೇ ತೊಂದರೆ ಬರುವುದಿಲ್ಲ. ಇನ್ನೂ ಕೆಲವರು ತೊಂದರೆ ಅನುಭವಿಸಿಯೂ ತಿದ್ದಿಕೊಳ್ಳದೆ ತಮ್ಮ ಅಮೋಘ ಜೀವನ ಹಾಳುಮಾಡಿಕೊಳ್ಳುತ್ತಾರೆ, ಎಲ್ಲೋ ಗತಿಸಿ ಹೋಗುತ್ತಾರೆ.



2. 

ತಾತ್ವಿಕದ ನುಡಿ ಚಂದ
ಸಾತ್ವಿಕದ ನಡೆ ಅಂದ
ಅಂದ ಚಂದಗಳ ಬಂಧ
ಸುಂದರಗೊಂಡ ಸಂಬಂಧ!
                                                  - ಎಮ್ಮೆಚ್ಚೆ 

ವಿಸ್ತೃತ


ತತ್ವದ ನುಡಿಗಳು ಕೇಳಲು ಚನ್ನಾಗಿರುತ್ತವೆ. ಸತ್ಯ ಮಾರ್ಗದಲಿ ನಡೆಯುವದು ಒಳ್ಳೆಯದಾಗುತ್ತದೆ. ಇಂಥಹ ತಿಳುವಳಿಕೆಯ ತತ್ವದ ಮಾತು ಕೇಳುತ್ತಾ ಸಾತ್ವಿಕ ಮಾರ್ಗದಲ್ಲಿ ನಡೆಯುವವರೊಂದಿಗೆ   ಒಡನಾಟ ಒಳ್ಳೆಯ ಸಂಭಂದವನ್ನೇ ಸೃಷ್ಟಿಸುತ್ತದೆ.


Comments

Post a Comment

Liked the post? Don't forget to tell us, do comment.

Popular Posts