1.

ಬಂಧಗಳ ಕಳೆದ ಬಂಧಿ
ಮಾಡಿದ್ದು ಮೇಲ್ಮಟ್ಟದ್ದು, 
ಬಂಧನದಲ್ಲಿರುವ ಸಂಬಂಧಿ
ಮಾಡಿದ್ದೇ ಗಂಟು ಕಟ್ಟಿದ್ದು!
                                                 - ಎಮ್ಮೆಚ್ಚೆ

ವಿಸ್ತ್ರುತ 
ಯಾವ ಸಂಬಂಧಿಗಳೂ ಇಲ್ಲದ, ರಾಗ ದ್ವೇಷ ಗಳನ್ನು ತ್ಯಜಿಸಿರುವಂತಹ ಸಾತ್ವಿಕ ವ್ಯಕ್ತಿಯ ಮನಸು ಸಾತ್ವಿಕವಾಗಿಯೇ ಇರುತ್ತದೆ. ಅಲ್ಲದೆ ಸಮಾಜ ಮುಖಿಯಾಗಿರುತ್ತದೆ. ಇಲ್ಲಿ ಇಡೀ ಮಾನವ ಕುಲಕ್ಕೆ ಒಳ್ಳೆಯದನ್ನು ಮಾಡಬೇಕೆಂಬ ತುಡಿತವಿರುತ್ತದೆಯೇ ಹೊರತು ಸ್ವಾರ್ಥವಲ್ಲ. ಇನ್ನು ನಾವು ಹುಸಿ ಭ್ರಮೆಗೊಳಗಾಗಿ ನಮ್ಮ ಸಂಬಂಧಿಗಳನ್ನು ಒಳ್ಳೆಯವರು ಮತ್ತು ಅನುಕೂಲವಾಗುವಂತವರೆಂದು ಮನಪೂರ್ವಕವಾಗಿ ನಂಬುತ್ತೇವೆ. ಅಂತವರುಗಳು ತಮ್ಮ ಸ್ವಾರ್ಥ ಬುದ್ದಿಯಿಂದ ತಮ್ಮ ಸ್ವಾಲಾಭದ ಕಡೆಗೆ ವಿಚಾರ ಉಳ್ಳವರಾಗಿರುತ್ತಾರೆ.

2.

ಪೂರ್ವಜರ ಹೇಳಿಕೆಯ ಪರಿ
ಸಿದ್ದನಿಗೇ ಒಲಿಯುವುದು ಅದೃಷ್ಟ,
ಪ್ರಚಲಿತದ ನಡೆಯದು ಸರಿ
ಸಿಗುವವರೆಗೂ ಅನಬಾರದು ಭ್ರಷ್ಟ!
                                                               - ಎಮ್ಮೆಚ್ಚೆ

ವಿಸ್ತೃತ 
ನಮ್ಮ ಇಚ್ಛೆಗಳನ್ನು ಈಡೇರಿಸಿ ಕೊಳ್ಳಬೇಕೆಂದರೆ ಆ ಇಚ್ಛಿತ ವಿಷಯದ ಬಗ್ಗೆ ಸಾಕಷ್ಟು ಪೂರ್ವಸಿದ್ಧತೆಯ ಪ್ರಾಮಾಣಿಕ ಪ್ರಯತ್ನ ಮಾಡಲೇಬೇಕು, ಶ್ರಮ ಪಡಲೇ ಬೇಕು ಬೇರೆ ಮಾರ್ಗಗಳಿಲ್ಲ. ಕಷ್ಟಪಟ್ಟು ಸಾಧನೆ ಮಾಡಿದ ಎಲ್ಲರಿಗೂ ಇಚ್ಛಿತ ಸ್ಥಾನ ಸಿಕ್ಕೇತೀರುತ್ತದೆ ಎಂಬ  ಭರವಸೆಗಳು ಇಲ್ಲ. ಆದ್ದರಿಂದ ನಮ್ಮ ಪ್ರಯತ್ನದ ಜೊತೆ ಅದೃಷ್ಟವೂ ಬಂದರೆ ನಮ್ಮ ಆಸೆಗಳೆಲ್ಲಾ ಸಂಪೂರ್ಣ ಕೈಗೂಡುತ್ತವೆ. ಅದೃಷ್ಟ ಕೇವಲ ಸಾಧಿಸುವ ಪ್ರಯತ್ನಗಾರರಿಗೆ ಒಲೆಯುತ್ತದೆಯೆ ಹೊರತು ಬೇರಾರಿಗೂ ಅಲ್ಲ. ಈ ಆಧುನಿಕ ಜಗತ್ತು ಎಂತಹ ಮನಸ್ಥಿತಿಯಲ್ಲಿದೆ ಎಂದರೆ, ಹೇಗಾದರೂ ಮಾಡಿ ಶ್ರೀಮಂತರಾಗಬೇಕೆಂಬ ದುರಾಸೆ ಹೊಂದಿದೆ. ಇಂಥ ಭ್ರಷ್ಟಾಚಾರಿಗಳ ಸಂಖ್ಯೆಯೇ ಅಧಿಕವಾಗಿ ಯಾರೂ ನಾಚಿಕೆ ಪಟ್ಟುಕೊಳ್ಳದ ಸ್ಥಿತಿ ನಿರ್ಮಾಣವಾಗಿದೆ. ಯಾರು ಕಾನೂನು ಬದ್ಧವಾಗಿ ಸಿಕ್ಕಿಹಾಕಿಕೊಳ್ಳುತ್ತಾರೂ ಅವರದು ಮಾತ್ರ ತಪ್ಪು. ಯಾರು ಭ್ರಷ್ಟಾಚಾರ ಮಾಡಿಯೂ ಸಿಕ್ಕಿಹಾಕಿಕೊಳ್ಳುವದಿಲ್ಲ ಅವರೆಲ್ಲಾ ಸಾಚಾಗಳು ಎನ್ನುವಂತಾಗಿದೆ.


Comments

Post a Comment

Liked the post? Don't forget to tell us, do comment.

Popular Posts